ಪ್ರಪಂಚ ಆಧುನಿಕವಾಗಿ ಮುಂದುವರಿದಂತೆ ಟೆಕ್ನಾಲಜಿಯೂ ಅಪ್ಡೇಟ್ ಆಗುತ್ತಲೇ ಇರುತ್ತದೆ, ಅದನ್ನು ಒಳ್ಳೆಯ ಉದ್ದೇಶಗಳಿಗೆ ಬಳಸಿಕೊಳ್ಳುವುದರಿಂದ ದೇಶದ ಅಭಿವೃದ್ದಿಯೂ ಆಗುತ್ತದೆ. ಆದರೆ ಕಂಪ್ಯೂಟರ್ ಟೆಕ್ನಾಲಜಿಯಂಥ ಉನ್ನತ ತಂತ್ರಜ್ಞಾನವನ್ನು ಸ್ಮಗ್ಲಿಂಗ್ ಮಾಡುವ ದುರುದ್ದೇಶಕ್ಕೆ ಬಳಸಿಕೊಳ್ಳುವ ಸೈಬರ್ ಚೋರರು, ಅಂಥವರ ಪ್ಲಾನನ್ನು ಪತ್ತೆಹಚ್ಚಿ ಹೆಡೆಮುರಿ ಕಟ್ಟುವ ಸೈಬರ್ ಪೋಲೀಸರ ಕಥೆ ಹೇಳುವ ಚಿತ್ರವೇ ಡೈಮಂಡ್ಕ್ರಾಸ್. ಟೈಟಲ್ ಕುರಿತು ಹೇಳುವುದಾದರೆ ದೇಶದಲ್ಲೇ ವಿಶೇಷ ಎನ್ನುವಂಥ ಡೈಮಂಡ್ ಕ್ರಾಸಿಂಗ್ ಎಂಬ ರೈಲ್ವೆ ಟ್ರಾಕ್ವೊಂದು ನಾಗ್ಪುರದಲ್ಲಿದೆ. ಅಲ್ಲಿ 4 ರೈಲ್ವೆ ಟ್ರಾಕ್ಗಳು ಒಂದೇಕಡೆ ಪ್ಲಸ್ ಆಕಾರದಲ್ಲಿ ಸೇರುತ್ತವೆ, ಆ ಕ್ರಾಸ್ ನೋಡಲು ಡೈಮಂಡ್ ಆಕಾರದಲ್ಲಿರುತ್ತದೆ, ಹಾಗಾಗಿ ಅದನ್ನು ಡೈಮಂಡ್ ಕ್ರಾಸಿಂಗ್ ಎಂದೇ ಕರೆಯುತ್ತಾರೆ. ಈ ಚಿತ್ರದಲ್ಲೂ ನಾಯಕ ಅಂಥದ್ದೊಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ, ಹಾಗಾಗಿ ಚಿತ್ರಕ್ಕೆ ಡೈಮಂಡ್ ಕ್ರಾಸ್ ಶೀರ್ಷಿಕೆ ಇಡಲಾಗಿದೆ.
ನಿರ್ದೇಶಕ ರಾಮ್ದೀಪ್ ಕಥೆಯಷ್ಟೇ ಪ್ರಾಮುಖ್ಯತೆಯನ್ನು ಆಕ್ಷನ್ಗೂ ನೀಡಿದಂತಿದೆ, ಪ್ರಥಮಾರ್ಧದಲ್ಲಿ ಜಾಸ್ತಿ ಆಕ್ಷನ್ಗಳಿದ್ದರೆ ಸೆಕೆಂಡ್ ಹಾಫ್ನಲ್ಲಿ ಚಿತ್ರಕಥೆ ಕುತೂಹಲ ಬೆಳೆಸುತ್ತ ಹೋಗುತ್ತದೆ, ರಿವರ್ಸ್ ಸ್ಕ್ರೀನ್ ಪ್ಲೈ ಮೇಲೆ ಕಥೆ ಸಾಗುವುದರಿಂದ ಚಿತ್ರದ ಪ್ರತಿ ದೃಶ್ಯವೂ ಪ್ರಮುಖವಾಗಿದೆ, ಅಪ್ಪು(ರಜತ್ ಅಣ್ಣಪ್ಪ), ಜಗ್ಗ ಹಾಗೂ ಆತನ ಇನ್ನಿಬ್ಬರು ಸ್ನೇಹಿತರು ಎಂಜಿನಿಯರಿಂಗ್ ಓದಿಕೊಂಡಿದ್ರೂ ನಿರುದ್ಯೋಗಿಗಳು, ಎಂಥದ್ದೇ ಸಿಕ್ರೇಟ್ ಕೋಡ್ಗಳಿದ್ದರೂ ಪತ್ತೆಹಚ್ಚಬಲ್ಲ. ಅದರಲ್ಲೂ ಕಂಪ್ಯೂಟರ್ ತಂತ್ರಜ್ಞಾನದ ಬಗ್ಗೆ ಹೆಚ್ಚು ತಿಳಿದುಕೊಂಡವನು ಅಪ್ಪು. ಈ ಗೆಳೆಯರೆಲ್ಲ ಸೇರಿ ಮಯೂರ ಗ್ಯಾಂಗ್ ಹೆಸರಿನಲ್ಲಿ ಒಂದಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಾರೆ, ಬಿಬಿಎಂಪಿ ಕೇಂದ್ರ ಕಛೇರಿಗೆ ನುಗ್ಗಿ ಸಾರ್ವಜನಿಕರು ಬಾಕಿ ಉಳಿಸಿಕೊಂಡಿದ್ದ ತೆರಿಗೆಯನ್ನೆಲ್ಲ ಪಾವತಿಯಾಗಿದೆ ಎಂದು ಅಪ್ಡೆಟ್ ಮಾಡುತ್ತಾರೆ. ಅದೇರೀತಿ ಜಲಮಂಡಳಿಯಲ್ಲಿ ಸಾರ್ವಜನಿಕರ ಪೆಂಡಿಂಗ್ ಬಿಲ್ ಗಳನ್ನೂ ಪೇಯ್ಡ್ ಅಂತ ಬದಲಾಯಿಸುತ್ತಾರೆ, ರಾಜ್ಯದಲ್ಲಿ ಮಳೆಯಿಲ್ಲದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ, ರಾಜಕಾರಣಿಗಳ ಸ್ವಾರ್ಥದಿಂದ ಜಲಾಶಯದಿಂದ ಹೊರರಾಜ್ಯಕ್ಕೆ ಹರಿದುಹೋಗುತ್ತಿದ್ದ ನೀರನ್ನು ಕಂಪ್ಯೂಟರ್ ನಿಯಂತ್ರಿತ ಡ್ಯಾಮ್ ದ್ವಾರಗಳನ್ನು ಕ್ಲೋಸ್ ಮಾಡುವ ಮೂಲಕ ಜನರಿಗೆ ಒಳ್ಳೆಯದನ್ನೇ ಮಾಡಿದರೂ ಕಾನೂನಿನ ದೃಷ್ಟಿಯಲ್ಲಿ ಅದು ಅಪರಾಧವೇ. ಇವರಲ್ಲದೆ ಜೆಡಿ ಎಂಬ ಮತ್ತೊಬ್ಬ ಸೈಬರ್ ಚೋರ ಅನೇಕ ವಿಧ್ವಂಸಕ ಕೃತ್ಯಗಳನ್ನು ಮಾಡುತ್ತ ಬರುತ್ತಾನೆ. ಈ ಎರಡೂ ತಂಡಗಳನ್ನು ಕಂಡುಹಿಡಿಯುವುದು ಸೈಬರ್ ಪೊಲೀಸರಿಗೆ ತಲೆನೋವಾಗಿ ಪರಿಣಮಿಸುತ್ತದೆ. ದಕ್ಷ ಸೈಬರ್ ಅಧಿಕಾರಿ ಅಭಯಂಕರ್ ಪ್ರಸಾದ್(ರೋಜರ್ ನಾರಾಯಣ್) ಪ್ಲಾನ್ ಮಾಡಿ, ಡ್ಯಾಮ್ ಸರ್ವರ್ ಇದ್ದ ಸ್ಥಳದಲ್ಲಿ ಹೊಂಚುಹಾಕಿ ಇವರನ್ನು ಚೇಜ್ ಮಾಡುತ್ತಾನೆ, ಆ ಸಮಯದಲ್ಲಿ ಅಪ್ಪು ಬಿಟ್ಟು ಉಳಿದ ಮೂವರೂ ಪೋಲೀಸ್ ಗುಂಡೇಟಿಗೆ ಬಲಿಯಾಗುತ್ತಾರೆ, ಅಪ್ಪು ಅರೆಸ್ಟ್ ಆಗುತ್ತಾನೆ, ನಂತರ ಒಬ್ಬ ಕಳ್ಳನನ್ನು ಪತ್ತೆಹಚ್ಚಲು ಇನ್ನೊಬ್ಬ ಕಳ್ಳನನ್ನೇ ಛೂ ಬಿಡಬೇಕು ಎಂಬಂತೆ ಅಪ್ಪು ಬುದ್ದಿವಂತಿಕೆ ಬಳಸಿಕೊಂಡು ಪೋಲೀಸರಿಗೆ ತಲೆನೋವಾಗಿದ್ದ ಜೆಡಿ ಗ್ಯಾಂಗನ್ನು ಹೇಗೆ ಪತ್ತೆಹಚ್ಚುತ್ತಾರೆ ಎನ್ನುವುದೇ ಚಿತ್ರದ ಕ್ಲೈಮ್ಯಾಕ್ಸ್.
ಡಿಜಿಟಲ್ ತಂತ್ರಜ್ಞಾನವನ್ನು ಒಳ್ಳೆಯ ಹಾಗೂ ವಿಧ್ವಂಸಕ ಕೃತ್ಯಗಳಿಗೆ ಹೇಗೆಲ್ಲಾ ಬಳಸಿಕೊಳ್ಳುತ್ತಾರೆ ಎಂಬುದನ್ನು ಚಿತ್ರದಲ್ಲಿ ಎಫೆಕ್ಟಿವ್ ಆಗಿ ತೋರಿಸಿದ್ದಾರೆ. ಪ್ರೇಕ್ಷಕ ಒಂದು ಸೀನ್ ಮಿಸ್ ಮಾಡಿಕೊಂಡರೂ ಕಥೆಯ ಲಿಂಕ್ ತಪ್ಪಿಹೋಗುತ್ತದೆ. ಪ್ರೇಕ್ಷಕನನ್ನು ೨ ಗಂಟೆ ಕಾಲ ಅತ್ತಿತ್ತ ಅಲುಗಾಡದಂತ ಹಿಡಿದಿಟ್ಟುಕೊಳ್ಳುವಂಥ ಗಟ್ಟಿಯಾದ ಚಿತ್ರಕಥೆ ಸಿನಿಮಾದಲ್ಲಿದೆ, ಟೈಟಲ್ ಸಾಂಗ್ ಬಿಟ್ಟರೆ ಚಿತ್ರದಲ್ಲಿ ಯಾವುದೇ ಹಾಡುಗಳಿಲ್ಲ, ಸಂತೋಷ್ ರಾಧಾಕೃಷ್ಣನ್ ಅವರ ಕ್ಯಾಮೆರಾ ವರ್ಕ್, ಅನಿಶ್ ಚೆರಿಯನ್ ಅವರ ಪರಿಣಾಮಕಾರಿ ಬಿಜಿಎಂ. ಎರಡೂ ಎಫೆಕ್ಟಿವ್ ಆಗಿದೆ, ನಾಯಕ ರಜತ್ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ. ಮನೀಶ್ ಅಂಡ್ ಮಿತ್ರ ಎಂಟರ್ಟೈನ್ಮೆಂಟ್ ಈ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡಿದೆ.